ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಕೇವಲ ಮೂರು ವಾರಗಳ ಹಿಂದೆ ನಡೆದ ಘರ್ಷಣೆಗಳು ಹಲವರ ಸಾವಿಗೆ ಕಾರಣವಾಯಿತು. ವಿಶೇಷವಾಗಿ ಚುರಾಚಂದ್ಪುರ ಮತ್ತು ಇಂಫಾಲದಲ್ಲಿ ಸಾವಿರಾರು ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದರು. ಆತಂಕಕಾರಿ ಅಂಶವೆಂದರೆ ಮೈಟಿ ಜನಾಂಗವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಸೂಚಿಸಿದ ಮಾರ್ಚ್ ೨೭ರ ಮಣಿಪುರ ಹೈಕೋರ್ಟಿನ ಆದೇಶದ ವಿರುದ್ಧ ಶುರುವಾದ ಪ್ರತಿಭಟನೆಗಳು ಈಗ ಪ್ರತ್ಯೇಕತೆಯ ತಿರುವು ಪಡೆದುಕೊಂಡಿದೆ. ಬಿಜೆಪಿ ಶಾಸಕರೂ ಸೇರಿದಂತೆ ಕುಕಿ-ಜೋಮಿ ಸಮುದಾಯದ ಪ್ರತಿನಿಧಿಗಳು ಈಗ “ಪ್ರತ್ಯೇಕ ಆಡಳಿತ”ದ ಬೇಡಿಕೆ ಇಟ್ಟಿದ್ದಾರೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಬಾರದಿತ್ತು. ಅಂತರ-ಸಮುದಾಯ ಸಂಬಂಧಗಳು ಈ ಹಿಂದೆಯೂ ಹಲವು ಬಾರಿ ಹದಗೆಟ್ಟಿತ್ತು ಮತ್ತು ಅನೇಕ ವರ್ಷಗಳ ಕಾಲ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ ಮೇ ತಿಂಗಳ ಘರ್ಷಣೆಗಳು ಬೆಟ್ಟ-ಕಣಿವೆಯ ಸಂಬಂಧಗಳಲ್ಲಿ ತೀವ್ರ ಅವನತಿಯನ್ನು ಸೂಚಿಸುತ್ತವೆ. ಮೇತೀ ಮತ್ತು ಕುಕಿ-ಜೋಮಿ ಸಮುದಾಯಗಳಲ್ಲಿನ ತೀವ್ರಗಾಮಿಗಳು ಮತ್ತು ದುಷ್ಕರ್ಮಿಗಳು ಮಾಡಿದ ಹಿಂಸಾಚಾರವನ್ನು ನಿಗ್ರಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭಾಗಶಃ ಇದು ಬಿಜೆಪಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರವು ನಿಷ್ಪಕ್ಷಪಾತದಿಂದ ನಡೆದುಕೊಳ್ಳದ ನೇರ ಪರಿಣಾಮ. ಕುಕಿ-ಜೋಮಿ ಗುಡ್ಡಗಾಡು ನಿವಾಸಿಗಳು ತಮ್ಮ ವಿರುದ್ಧದ ನಡೆಗಳು ಎಂದು ಪರಿಗಣಿಸಿದ ಪಾಪ್ಪಿ-ವಿರೋಧಿ ಅಭಿಯಾನದಂತಹ ಕ್ರಮಗಳು ಅವರಿಗೆ ಕೋಪ ತರಿಸಿದ್ದವು. ಹೈಕೋರ್ಟಿನ ಏಕಸದಸ್ಯ ಪೀಠದ ಅಸಮಂಜಸ ಆದೇಶ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಸ್ವತಃ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೈಕೋರ್ಟ್ ಆದೇಶವು ೨೩ ವರ್ಷದ ಹಿಂದಿನ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಚುರಾಚಂದ್ಪುರ ಮತ್ತು ಇಂಫಾಲ್ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಪ್ರಸ್ತುತ ಆಡಳಿತದ ಅಸಮರ್ಥತೆಯನ್ನು ಸೂಚಿಸುತ್ತದೆ.
ರಾಜ್ಯ ಸರ್ಕಾರವು ಕೇಂದ್ರದ ಸಹಾಯ ಪಡೆದು ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಪಡೆ ಮತ್ತು ಪೊಲೀಸ್ ಪಡೆಗಳ ಗಸ್ತು ಹೆಚ್ಚಿಸಿ, ನಿರಾಶ್ರಿತರಿಗೆ ಪರಿಹಾರ ನೀಡಿ, ತೀವ್ರಗಾಮಿಗಳ ಪ್ರಭಾವ ಮೊಟಕುಗೊಳಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಬೇಕಿದೆ. ಮಧ್ಯಮಾವಧಿಯಲ್ಲಿ ಸ್ಥಳಾಂತರಗೊಂಡವರು ತಮ್ಮ ಮನೆಗಳಿಗೆ ಮರಳಲು ಅನುವು ಮಾಡಿಕೊಡಬೇಕು. ಹಾಗೆ ಮಾಡದಿರುವುದು ಎರಡೂ ಕಡೆ ಪ್ರತ್ಯೇಕತೆಯನ್ನು ಒತ್ತಿ ಹೇಳುವ ಕೋಮುವಾದಿಗಳ ಕೈಬಲಪಡಿಸುತ್ತದೆ. ಇವೆಲ್ಲವೂ ದೀರ್ಘಾವಧಿಯಲ್ಲಿ ರಾಜ್ಯಕ್ಕೆ ಹಾನಿಕಾರಕವಾಗಿದೆ. ಮಣಿಪುರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವಂತಿಲ್ಲ. ಇತರೆ ಕೆಲವು ಈಶಾನ್ಯ ರಾಜ್ಯಗಳಂತೆ, ಮಣಿಪುರವು ತನ್ನ ನಿವಾಸಿಗಳಲ್ಲಿ ಜನಾಂಗೀಯ ಗುರುತುಗಳಿಂದ ಮೇಲೇರಲು ಸಹಾಯಕವಾಗುವಂತೆ ಒಂದು ನಾಗರೀಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ. ಸಮುದಾಯದ ಮುಖಂಡರು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳ ನಡುವೆ ನಂಬಿಕೆ ಇಲ್ಲದಿರುವುದರಿಂದ ಮಣಿಪುರದ ಒಳಗೆ ಮತ್ತು ಹೊರಗೆ ಇರುವ ನಾಗರೀಕ ಸಮಾಜದ ಪ್ರತಿನಿಧಿಗಳು ಅಂತರ್-ಸಮುದಾಯ ಸಂಬಂಧಗಳನ್ನು ಮರುಸ್ಥಾಪಿಸಬೇಕಿದೆ. ಸಮುದಾಯಗಳ ಪ್ರಾತಿನಿಧೀಕರಣವನ್ನು ಉಗ್ರಗಾಮಿ ಗುಂಪುಗಳು ವಹಿಸದಂತೆ ಎಚ್ಚರ ವಹಿಸಬೇಕಿದೆ.
COMMents
SHARE