ಇತ್ತೀಚಿನ ಇಂಡಿಯನ್ ಪ್ರೀಮಿಯರ್ ಲೀಗ್ನ ರೋಚಕ ಆಟದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ತಮ್ಮ ಟೆಸ್ಟ್ ವೈಟ್ಗಳಲ್ಲಿ ಒಟ್ಟಿಗೆ ಸೇರುವ ಸಮಯ. ಟ್ವೆಂಟಿ-ಟ್ವೆಂಟಿ ಪಂದ್ಯಗಳು ರೋಚಕವಾಗಿರಬಹುದು, ಆದರೆ ಆಟದ ನಿಜವಾದ ರಸಜ್ಞರಿಗೆ ಒಬ್ಬ ಆಟಗಾರ ಮತ್ತು ತಂಡದ ಸಾಮರ್ಥ್ಯ ಅಳೆಯಲು ಐದು ದಿನಗಳವರೆಗೆ ಹರಡಿರುವ ಟೆಸ್ಟ್ ಕ್ರಿಕೆಟ್ಟೆ ಅಂತಿಮ ಮಾನದಂಡ. ಬುಧವಾರ ಲಂಡನ್ನ ಓವಲ್ನಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಏಷ್ಯನ್ನರು, ಆಫ್ರಿಕನ್ನರು ಮತ್ತು ವೆಸ್ಟ್ ಇಂಡಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಲಂಡನ್ನಿನ ಭಾಗದಲ್ಲಿ ಓವಲ್ ಕ್ರೀಡಾಂಗಣ ಇದೆ. ಹಾಗಾಗಿ ಭಾರತಕ್ಕೆ ಬೆಂಬಲದ ಕೊರತೆಯಿಲ್ಲ. ಈ ಪಂದ್ಯ ವಿದೇಶದಲ್ಲಿ ನಡೆಯುತ್ತಿರಬಹುದು. ಆದರೆ ಭಾರತೀಯರೇ ಹೆಚ್ಚಾಗಿರುವ ಪ್ರೇಕ್ಷಕರ ಗ್ಯಾಲರಿಗಳನ್ನು ನೋಡಿದಾಗ ರೋಹಿತ್ ಶರ್ಮಾ ಅವರ ನೇತೃತ್ವದ ತಂಡಕ್ಕೆ ತವರಿನಲ್ಲೇ ಆಡುತ್ತಿರುವ ಭಾವ ಮೂಡಬಹುದು. ತವರಿನಲ್ಲಿಯೇ ಇರಲಿ ಅಥವಾ ಹೊರಗೇ ಆಗಿರಲಿ, ಆಸ್ಟ್ರೇಲಿಯಾ ವಿರುದ್ಧದ ತನ್ನ ಇತ್ತೀಚಿನ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಎರಡೂ ತಂಡಗಳ ನಡುವೆ ಒಂದು ಆಹ್ಲಾದಕರ ಪೈಪೋಟಿ ಏರ್ಪಟ್ಟಿರುವುದು ಸತ್ಯ. ಆದರೆ ಇದು ಫೈನಲ್ ಪಂದ್ಯವಾಗಿರುವುದರಿಂದ ಎರಡೂ ತಂಡಗಳ ಮೇಲೆ ಹೆಚ್ಚುವರಿ ಒತ್ತಡ ಇರುತ್ತದೆ ಮತ್ತು ಎರಡೂ ತಂಡಗಳು ಸಮಾನ ನೆಲೆಯಲ್ಲಿ ಮೈದಾನ ಪ್ರವೇಶಿಸುತ್ತವೆ. ಭಾರತ ಕಡೆಯ ಬಾರಿ ಐಸಿಸಿ ಪ್ರಶಸ್ತಿ ಗೆದ್ದಿರುವುದು ೨೦೧೩ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಈ ಐತಿಹಾಸಿಕ ನಿರ್ವಾತವನ್ನು ತುಂಬಬೇಕು ಎಂದು ರೋಹಿತ್ ಶರ್ಮಾ ಮತ್ತು ಸಂಗಡಿಗರಿಗೆ ಅನಿಸುವುದು ಸಹಜ.
ಹಿಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ೨೦೨೧ರಲ್ಲಿ ಸೌತಾಂಪ್ಟನ್ನಲ್ಲಿ ನಡೆದ ಫೈನಲ್ನಲ್ಲಿ ಕೊನೆಗೊಂಡಿತು. ಆಗ ಭಾರತ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ ಸೋತಿತು. ನಾಯಕ ರೋಹಿತ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಹಿರಿಯರ ಗುಂಪಿಗೆ ಓವಲ್ ಸ್ಪರ್ಧೆಯು ಐಸಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳಲು ಮತ್ತೊಂದು ಅವಕಾಶ. ಗಾಯಗೊಂಡ ಜೋಡಿಯಾದ ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆದರೆ ಶುಭಮನ್ ಗಿಲ್ ಶ್ರೇಷ್ಠತೆಯತ್ತ ಹೆಜ್ಜೆ ಹಾಕುತ್ತಿರುವ ಬ್ಯಾಟರ್ ಎಂದೆನಿಸುತ್ತದೆ. ಆಸೀಸ್ ವೇಗಿಗಳ ವಿರುದ್ಧ ಭಾರತೀಯ ಬ್ಯಾಟಿಂಗ್ ಬಗ್ಗೆ ಹಳೆಯ ಕ್ಲೀಷೆ ಮತ್ತೆ ಚಾಲ್ತಿಗೆ ಬರಲಿದೆ. ಭಾರತ ತಂಡದಲ್ಲಿ ಸಹ ಪ್ರಬಲ ವೇಗಿಗಳಿದ್ದಾರೆ. ನಾಯಕ ರೋಹಿತ್ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ ಇಬ್ಬರನ್ನೂ ಆಡಿಸುತ್ತಾರೋ ಅಥವಾ ಒಬ್ಬರನ್ನು ಆರಿಸಿಕೊಳ್ಳುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ. ಸಿಡ್ನಿಯ ಎಸ್.ಸಿ.ಜಿ.ಯಂತೆ ಓವಲ್ ಕ್ರೀಡಾಂಗಣದ ಪಿಚ್ಚಿನ ಮೇಲ್ಮೈ ಸಹ ಉಪಖಂಡದ ಪಿಚ್ಚುಗಳಂತೆ ಇರುವ ಸಾಧ್ಯತೆ ಇದೆ. ಆದರೆ ಯಾವಾಗ ಮಳೆ ಬರುತ್ತದೋ ಹೇಳಲಾಗದ ಇಂಗ್ಲೆಡಿನಲ್ಲಿ ಪಿಚ್ ಮೇಲೆ ಹುಲ್ಲಿನ ಸುಳಿವಿನೊಂದಿಗೆ ಪಂದ್ಯವು ಸವಾಲಿನದಾಗಬಹುದು. ಪ್ರತಿಸ್ಪರ್ಧಿ ನಾಯಕ ಪ್ಯಾಟ್ ಕಮ್ಮಿನ್ಸ್ ಬಲವಾದ ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಅದಕ್ಕೆ ಮಿಚೆಲ್ ಸ್ಟಾರ್ಕ್ ಎಡಗೈ ಆಯಾಮವನ್ನು ನೀಡುತ್ತಾರೆ. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು ಬ್ಯಾಟಿಂಗಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಜೊತೆಯಾಗಲಿದ್ದಾರೆ. ಮುಂದೆ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿ ಇರುವುದರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲುವು ತಂಡಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂದು ಅವರು ಆಶಿಸಿದರೆ, ಭಾರತವು ತನ್ನ ಸ್ಥಿತಪ್ರಜ್ಞತೆಯನ್ನು ಕಾಯ್ದಿಟ್ಟುಕೊಂಡು ಫೈನಲ್ಸ್ ಗೆಲ್ಲಬಲ್ಲೆವು ಎಂದು ಸಾಬೀತುಪಡಿಸಲು ಹವಣಿಸುತ್ತಿದೆ.
COMMents
SHARE