ದೈತ್ಯ ಹೊರಾಂಗಣ ಜಾಹೀರಾತು ಫಲಕಗಳು ಕುಸಿದು ಅಪ್ಪಳಿಸಿ ಸಾವಿನ ಬಲೆಗಳಾಗಿ ಮಾರ್ಪಡುವ ಘಟನೆಗಳು ನಗರ ಪರಿಸರದಲ್ಲಿ ಈಗ ಅಪರೂಪವಾಗಿ ಉಳಿದಿಲ್ಲ. ಕಳೆದ ವಾರ ಕೊಯಮತ್ತೂರಿನಲ್ಲಿ ಬದಲಿಸಲು ಇಟ್ಟಿದ್ದ ಹೋರ್ಡಿಂಗ್ನ ಉಕ್ಕಿನ ಚೌಕಟ್ಟುಗಳು ಬಿದ್ದು ಮೂವರು ಕಾರ್ಮಿಕರು ಮೃತರಾದರು, ಇಂತಹ ದುರಂತಗಳು ವಿರಳವೇನಲ್ಲ. ಜಾಹೀರಾತು ಫಲಕವು ಕಾನೂನುಬಾಹಿರವಾಗಿತ್ತು ಎಂದು ಅಧಿಕಾರಿಗಳು ಆತುರದಲ್ಲಿಯೇ ಘೋಷಿಸಿದರಾದರೂ, ಅದು ಅಲ್ಲಿ ಹೇಗೆ ತಲೆಯೆತ್ತಿತ್ತು ಎಂಬುದರ ಬಗ್ಗೆ ಯಾವುದೇ ವಿವರಣೆಯನ್ನು ನೀಡಲಿಲ್ಲ. ವಿಪರ್ಯಾಸವೆಂದರೆ, ಹೋರ್ಡಿಂಗ್, ಬ್ಯಾನರ್ ಮತ್ತು ಪ್ಲಕಾರ್ಡ್ಗಳಿಗೆ ಪರವಾನಗಿ ನೀಡುವ ನಿಯಮಗಳೊಂದಿಗೆ, ಏಪ್ರಿಲ್ನಲ್ಲಿ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ನಿಯಮಗಳು 2023 ಅಧಿಸೂಚಿಸನೆಯನ್ನು ಹೊರಡಿಸಲಾಗಿತ್ತು. ನಗರಗಳಲ್ಲಿ ಜಾಹೀರಾತು ಫಲಕಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ ಎಂಬ ಆತಂಕದ ನಡುವೆಯೇ, ಅನಧಿಕೃತ ಜಾಹೀರಾತು ಫಲಕಗಳಿಗೆ ಅನುಮತಿ ಸಿಗದಂತೆ ನೋಡಿಕೊಳ್ಳಲು ನಿಯಮಗಳನ್ನು ಸೂಚಿಸಲಾಗಿತ್ತು ಎಂದು ಪೌರಾಡಳಿತ ಸಚಿವರು ಸ್ಪಷ್ಟವಾಗಿ ಹೇಳಿದ್ದರು. ಕನಿಷ್ಠ ಎರಡು ದಶಕಗಳಿಂದ ಇರುವ ವರದಿಗಳು ಹೇಳುವುದೇನೆಂದರೆ ಪರವಾನಗಿ ಇಲ್ಲದ ಹೋರ್ಡಿಂಗ್ಗಳನ್ನು ತಡೆಯುವಲ್ಲಿ ಅನೇಕ ಮುನ್ಸಿಪಲ್ ಕಾರ್ಪೊರೇಷನ್ಗಳ ವಿಫಲವಾಗಿವೆ ಎಂದು. ಮಾರಣಾಂತಿಕ ಅಪಘಾತಗಳಿಂದ ಪ್ರಚೋದಿಸಲ್ಪಟ್ಟು ಅಥವಾ ನ್ಯಾಯಾಂಗದ ಹಸ್ತಕ್ಷೇಪದ ಪರಿಣಾಮವಾಗಿ, ಸಾಂದರ್ಭಿಕವಾಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 2008 ರಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ, ತಮಿಳುನಾಡು ಮತ್ತು ಅದರ ರಾಜಧಾನಿ ಚೆನ್ನೈನಲ್ಲಿ, ಸಾವಿರಾರು ಅನಧಿಕೃತ ಹೋರ್ಡಿಂಗ್ಗಳನ್ನು ತೆಗೆದುಹಾಕಲಾಯಿತು, ಇದರಿಂದ ಮುಚ್ಚಿಹೋಗಿದ್ದ ಹಸಿರು ಭೂದೃಶ್ಯಗಳು ಮತ್ತು ಆಕಾಶದಡಿಯ ನಗರ ಕಟ್ಟದಗಳು ಕಾಣುವಂತಾದವು.
ದುರದೃಷ್ಟವಶಾತ್, ಈ ಕ್ರಮವನ್ನು ಮುಂದಕ್ಕೆ ಉಳಿಸಿಕೊಳ್ಳಲಾಗಿಲ್ಲ. ಉಲ್ಲಂಘನೆ ಮಾಡಿದ ಮೊದಲಿಗರಲ್ಲಿ ರಾಜಕೀಯ ಪಕ್ಷಗಳು ಸೇರಿದ್ದವು, ಫ್ಲೆಕ್ಸ್ ಬ್ಯಾನರ್ಗಳು ಮತ್ತು ಪ್ರಕಾಶಿತ ಕಟ್-ಔಟ್ಗಳ ಮೇಲೆ ತಮ್ಮ ನಿಜ ಆಕೃತಿಗಿಂತ ದೊಡ್ಡದಾದ ಚಿತ್ರಗಳನ್ನು ಅನೇಕ ನಾಯಕರು ಪ್ರೋತ್ಸಾಹಿಸಿದ್ದರು. 2019ರಲ್ಲಿ ಚೆನ್ನೈನಲ್ಲಿ ರಾಜಕೀಯ ಪಕ್ಷವೊಂದು ಹಾಕಿದ್ದ ಬ್ಯಾನರ್, ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವತಿಗೆ ಬಡಿದು, ರಸ್ತೆ ಅಪಘಾತದಲ್ಲಿ ಆಕೆ ಪ್ರಾಣ ಕಳೆದುಕೊಂಡಾಗ ಗಣನೀಯ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳು ಮತ್ತು ಅವರುಗಳ ಒಕ್ಕೂಟಗಳ ಬಿಗಿ ಹಿಡಿತದಲ್ಲಿ, ಲಾಭದಾಯಕ ಹೊರಾಂಗಣ ಜಾಹೀರಾತು ಹಕ್ಕುಗಳು ಇರುವುದರಿಂದ, ಕಾನೂನು ಮತ್ತು ಎಲ್ಲಾ ಹವಾಮಾನದ ರಚನಾತ್ಮಕ ಸ್ಥಿರತೆಯ ಅವಶ್ಯಕತೆಗಳ ನಿಯಮಗಳನ್ನು ಜಾರಿಗೊಳಿಸಲು ಆಡಳಿತಾತ್ಮಕ ಇಚ್ಛೆ ಇಲ್ಲವಾಗಿದೆ. ಪರವಾನಗಿ ಇಲ್ಲದ ಹೋರ್ಡಿಂಗ್ಗಳನ್ನು ಎಣಿಸಲು, ಕಾಲಕಾಲಕ್ಕೆ ಅಧಿಕೃತ ಜಾಹೀರಾತು ಫಲಕಗಳನ್ನು ಪರಿಶೀಲಿಸಲು ಮತ್ತು ಅಸ್ಥಿರ ಅಥವಾ ಕಾನೂನುಬಾಹಿರವಾದವುಗಳ ವಿರುದ್ಧ ಕ್ರಮ ಕೈಗೊಳ್ಳಲು ಪುರಸಭೆಗಳಲ್ಲಿನ ಸಿಬ್ಬಂದಿ ಕೊರತೆಯು ಕೂಡ ಅಪಘಾತಗಳಿಗೆ ಕೊಡುಗೆ ನೀಡುತ್ತದೆ. ಜಾಹೀರಾತು ಫಲಕಗಳ ನಿಯಂತ್ರಣಕ್ಕೆ ಒತ್ತಾಯಿಸುವ ನ್ಯಾಯಾಂಗವು, ಆಗಾಗ್ಗೆ ಅನಧಿಕೃತ ಫಲಕಗಳನ್ನು ತೆಗೆದುಹಾಕದಂತೆ ಅಧಿಕಾರಿಗಳಿಗೆ ತಡೆಯಾಜ್ಞೆ ನೀಡಿ ಆದೇಶಗಳನ್ನು ಹೊರಡಿಸುವುದು ಕಳವಳಕಾರಿ ಅಂಶವಾಗಿದೆ. ಉಲ್ಲಂಘಿಸುವವರು ಕಠಿಣ ಶಿಕ್ಷೆಗೆ ಅರ್ಹರು; ಸಾವಿನ ಪ್ರಕರಣದಲ್ಲಿ, ಗಂಭೀರ ಆರೋಪಗಳನ್ನು ಹೊರಿಸುವುದು, ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಅವರಿಂದ ಪರಿಹಾರವನ್ನು ವಸೂಲಿ ಮಾಡುವುದು ಮತ್ತು ಉದಾಸೀನ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವುದು ಸೂಕ್ತವಾಗಿದೆ. ಬಿಲ್ಬೋರ್ಡ್ಗಳು ರಸ್ತೆಗಳಲ್ಲಿ ಅಪಾಯಕಾರಿಯಾಗಿ ವಿಚಲಿತಗೊಳ್ಳಲು ಕಾರಣವಾಗುತ್ತವೆ, ಏಕೆಂದರೆ ಅವುಗಳು ಚಾಲಕನ ಪ್ರತಿಕ್ರಿಯೆ ಸಮಯ, ವಾಹನದ ಪಾರ್ಶ್ವ ನಿಯಂತ್ರಣ ಮತ್ತು ಸಾಂದರ್ಭಿಕ ಅರಿವಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಅಂತಾರಾಷ್ಟ್ರೀಯ ಅಧ್ಯಯನಗಳು ಸೂಚಿಸುತ್ತವೆ. ಇಂತಹ ವಿಚಲಿತತೆಯಿಂದ ಉಂಟಾದ ಅಪಘಾತಗಳನ್ನು ಭಾರತದ ವಾರ್ಷಿಕ ರಸ್ತೆ ಅಪಘಾತಗಳ ವರದಿಯಲ್ಲಿ ದಾಖಲಿಸಬೇಕು. ಜಾಗತಿಕವಾಗಿ 2023ರಲ್ಲಿ $67.8 ಶತಕೋಟಿಗೆ ಬೆಳೆಯಲು ಸಿದ್ಧವಾಗಿರುವ, ಜಾಹೀರಾತು ಫಲಕಗಳು ಮತ್ತು ಹೊರಾಂಗಣ ಜಾಹೀರಾತು ಮಾರುಕಟ್ಟೆಯಲ್ಲಿ ಉತ್ತಮ ನೀತಿಗಳನ್ನು ರೂಪಿಸಲು ಇದು ಸಹಾಯ ಮಾಡುತ್ತದೆ.
COMMents
SHARE