ಕೆಲವು ಸುರಕ್ಷತಾ ಮಾನದಂಡದೊಂದಿಗೆ, ದೇಶದ್ರೋಹದ ಅಪರಾಧವನ್ನು ದಂಡಸಂಹಿತೆ ಕಾನೂನಿನಲ್ಲಿ ಉಳಿಸಿಕೊಳ್ಳಬೇಕು ಎಂಬ ಕಾನೂನು ಆಯೋಗದ ಶಿಫಾರಸ್ಸು, ಈ ದೇಶಕ್ಕೆ ವಸಾಹತುಶಾಹಿ ಕುರುಹುಗಳು ಅಗತ್ಯವಿಲ್ಲವೆಂಬ ಪ್ರಸ್ತುತ ನ್ಯಾಯಾಂಗ ಮತ್ತು ರಾಜಕೀಯ ಚಿಂತನೆಗೆ ವಿರುದ್ಧವಾಗಿದೆ. ದೇಶದ್ರೋಹವನ್ನು ವಿವರಿಸುವ ಐಪಿಸಿಯ ಸೆಕ್ಷನ್ 124ಎ, ದ್ವೇಷ ಅಥವಾ ತಿರಸ್ಕಾರವನ್ನು ಉತ್ತೇಜಿಸಲು ಪ್ರಯತ್ನಿಸುವ ಅಥವಾ ಕಾನೂನಿನ ಮೂಲಕ ಸ್ಥಾಪಿಸಲಾದ ಸರ್ಕಾರದ ಕಡೆಗೆ ಅಸಮಾಧಾನವನ್ನು ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ ಭಾಷಣ ಅಥವಾ ಬರವಣಿಗೆಯನ್ನು ಶಿಕ್ಷಿಸಲು ಪ್ರಯತ್ನಿಸುತ್ತದೆ. ಸುಪ್ರೀಂ ಕೋರ್ಟ್ 1962 ರಷ್ಟು ಹಿಂದೆಯೇ ಇದರ ಸಿಂಧುತ್ವವನ್ನು ಎತ್ತಿಹಿಡಿದಿದೆ, ಆದರೆ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುವ ಧೋರಣೆಯನ್ನು ಹೊಂದಿರುವ ಮಾತುಗಳ ಅಪರಾಧಕ್ಕೆ ಅದು ಸೀಮಿತವಾಗಿದ್ದು, ಇದು ವಾಕ್ ಸ್ವಾತಂತ್ರ್ಯದ ಮೇಲೆ ಸಂವಿಧಾನಾತ್ಮಕವಾಗಿ ಅನುಮತಿಸುವ ನಿರ್ಬಂಧವಾಗಿದೆ ಎಂದಿದೆ. ಆದಾಗ್ಯೂ, ಅಲ್ಲಿಂದೀಚೆಗೆ ವಾಕ್ ಸ್ವಾತಂತ್ರ್ಯದ ನ್ಯಾಯಶಾಸ್ತ್ರವು ಎಷ್ಟು ದೂರ ಸಾಗಿದೆ ಎಂಬುದನ್ನು, ಈ ಸಮಿತಿಯ ವರದಿಯು ಪರಿಗಣಿಸಲು ವಿಫಲವಾಗಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಕಳೆದ ವರ್ಷ ಬಾಕಿ ಉಳಿದಿರುವ ದೇಶದ್ರೋಹ ಪ್ರಕರಣಗಳನ್ನು ಅಮಾನತ್ತಿನಲ್ಲಿ ಇಡುವಾಗ, ನ್ಯಾಯಾಲಯವು “ಐಪಿಸಿಯ ಸೆಕ್ಷನ್ 124ಎಯ ಕಠಿಣ ಸಂಗತಿಗಳು ಪ್ರಸ್ತುತ ಸಾಮಾಜಿಕ ಪರಿಸರಕ್ಕೆ ಹೊಂದಿಕೆಯಾಗುವುದಿಲ್ಲ” ಎಂದು ಗಮನಿಸಿತ್ತು. ಕೇಂದ್ರ ಸರ್ಕಾರ ಕೂಡ ಈ ನಿಬಂಧನೆಯನ್ನು ಮರುಪರಿಗಣನೆಗೆ ತೆಗೆದುಕೊಂಡು, ಮರುಪರಿಶೀಲಿಸಲು ನಿರ್ಧರಿಸಿದೆ. ಮೂಲಭೂತ ಹಕ್ಕುಗಳ, ವಿಶೇಷವಾಗಿ ವಾಕ್ ಸ್ವಾತಂತ್ರ್ಯದ ಮೇಲಿನ ಯಾವುದೇ ನಿರ್ಬಂಧದ ಸಿಂಧುತ್ವವನ್ನು ಪರೀಕ್ಷಿಸಲು ಇತ್ತೀಚಿನ ತತ್ವಗಳ ಬೆಳಕಿನಲ್ಲಿ ನಿಬಂಧನೆಯನ್ನು ಪರಿಗಣಿಸುವ ಸಮಯ ಬಂದಿದೆ. ಅದರ ಮಿತಿಮೀರಿದ ಸ್ವಭಾವವನ್ನು ಗಮನಿಸಿದರೆ, ದೇಶದ್ರೋಹದ ವ್ಯಾಖ್ಯಾನವು ಅಂತಹ ಪರಿಶೀಲನೆಯಿಂದ ಬಚಾವಾಗಿ ಉಳಿಯುವುದಿಲ್ಲ.
ಆಯೋಗವು ದೇಶದ್ರೋಹದ ಬಗ್ಗೆ ಸಾಮಾನ್ಯವಾಗಿ ಏಳುವ ಎರಡು ಕಳವಳಗಳನ್ನು ಪರಿಹರಿಸಲು ಪ್ರಯತ್ನಿಸಿದೆ: ಅದರ ಅತಿರೇಕದ ದುರುಪಯೋಗ ಮತ್ತು ಇಂದಿನ ದಿನಕ್ಕೆ ಅದರ ಪ್ರಸ್ತುತತೆ. ಕಾನೂನಿನ ದುರುಪಯೋಗವು ಅದನ್ನು ಹಿಂಪಡೆಯಲು ಯಾವುದೇ ಆಧಾರವಲ್ಲ ಎಂಬ ಕ್ಲೀಷೆಯ ವಾದವನ್ನು ಅದು ಪುನರಾವರ್ತಿಸಿದೆ. ಆದಾಗ್ಯೂ, ಇದು ಪರಿಗಣಿಸಲು ವಿಫಲವಾದ ಸಂಗತಿಯೆಂದರೆ, ಕಾನೂನಿನಲ್ಲಿ ಅದರ ಅಸ್ತಿತ್ವವು, ಆಗಾಗ್ಗೆ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಮತ್ತು ಟೀಕಾಕಾರರನ್ನು ಜೈಲಿನಲ್ಲಿಡುವ ಪೂರ್ವನಿರ್ದೇಶಿತ ಉದ್ದೇಶದಿಂದ, ನ್ಯಾಯಸಮ್ಮತವಲ್ಲದ ಬಳಕೆಗೆ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ. ವರದಿಯಲ್ಲಿ ಸೂಚಿಸಿದಂತೆ ಕೇವಲ ಪೂರ್ವ ಮಂಜೂರಾತಿ ಅಗತ್ಯತೆ ಅಥವಾ ಕಡ್ಡಾಯವಾದ ಪ್ರಾಥಮಿಕ ತನಿಖೆಯು ದೇಶದ್ರೋಹದ ಪ್ರಕರಣಗಳನ್ನು ತಗ್ಗಿಸುತ್ತವೆ ಎಂಬುದು ಸಂಶಯಾತ್ಮಕವಾಗಿದೆ. ಮುಂದುವರಿದು, ಸಮಿತಿಯು ವಸಾಹತುಶಾಹಿ ಯುಗದ ನಿಬಂಧನೆಯಾಗಿದೆ ಎಂಬ ನೆಲೆಯು ಅದನ್ನು ತೊಡೆದುಹಾಕಲು ಯಾವುದೇ ಆಧಾರವಲ್ಲ ಎಂದು ವಾದಿಸಿದೆ. ದೇಶದಲ್ಲಿನ ವಿವಿಧ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಚಳವಳಿಗಳು ಮತ್ತು ಪ್ರವೃತ್ತಿಗಳನ್ನು, ಹಾಗೆಯೇ “ತೀವ್ರವಾದವನ್ನು ಪ್ರಚಾರ ಮಾಡುವಲ್ಲಿ ಸಾಮಾಜಿಕ ಮಾಧ್ಯಮದ ನಿರಂತರ ಪಾತ್ರ”ವನ್ನು ಉದಾಹರಿಸುವ ಮೂಲಕ ದಂಡಸಂಹಿತೆ ಕಾನೂನಿನಲ್ಲಿ ದೇಶದ್ರೋಹವನ್ನು ಇಟ್ಟುಕೊಳ್ಳುವ ಅಗತ್ಯವನ್ನು ಅದು ಸಮರ್ಥಿಸಿದೆ. ವಿಭಜಿಸುವ ಪ್ರಚಾರ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುವ ಅಪರಾಧಗಳನ್ನು ಇತರ ದಂಡಸಂಹಿತೆ ನಿಬಂಧನೆಗಳಿಂದ ನಿಗ್ರಹಿಸಬಹುದಾದ್ದರಿಂದ ಇದನ್ನು ಉಳಿಸಿಕೊಳ್ಳಲು ಅದು ಅಗತ್ಯ ಕಾರಣವಲ್ಲ. ವಾಸ್ತವವಾಗಿ, ಸರ್ಕಾರವನ್ನು ಗುರಿಯಾಗಿಸುವ ಭಾಷಣ ಅಥವಾ ಬರವಣಿಗೆಗೆ ದಂಡ ವಿಧಿಸುವುದಕ್ಕಿಂತ, ದ್ವೇಷದ ಭಾಷಣದ ವಿರುದ್ಧ ಪರಿಣಾಮಕಾರಿ ಕಾನೂನು ಚೌಕಟ್ಟಿನ ಅಗತ್ಯವಿದೆ. ವರದಿಯ ಹೊರತಾಗಿಯೂ, ನಿಬಂಧನೆಯನ್ನು ರದ್ದುಗೊಳಿಸುವ ಬಗ್ಗೆ ಸರ್ಕಾರ ಯೋಚಿಸಬೇಕು.
COMMents
SHARE