ತಮ್ಮ ಪ್ರಜೆಗಳಿಗೆ ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುವ ಮುಕ್ತ ಗಡಿಯನ್ನು ಹಂಚಿಕೊಳ್ಳುವ ನೇಪಾಳ ಮತ್ತು ಭಾರತ ತುಂಬಾ ಹತ್ತಿರದ ಸಂಬಂಧವನ್ನು ಹೊಂದಿವೆ. ಅವರ ಸಂಬಂಧವು ನಿಕಟ ಆರ್ಥಿಕ, ಭದ್ರತಾ ಮತ್ತು ಸಾಂಸ್ಕೃತಿಕ ಸಂಬಂಧಗಳಿಂದ ನಿರೂಪಿಸಲ್ಪಟ್ಟಿದೆ. ಭಾರತವು ಪ್ರಮುಖ ವ್ಯಾಪಾರ ಮತ್ತು ಸಾರಿಗೆ ಪಾಲುದಾರನಾಗಿ ಉಳಿದಿದೆ. ಇಲ್ಲಿ ಹಲವಾರು ನೇಪಾಳಿಗಳು ಜೀವನೋಪಾಯವನ್ನು ಗಳಿಸುವುದನ್ನು ಅಥವಾ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರಿಸಿದ್ದಾರೆ. ಏತನ್ಮಧ್ಯೆ, ನೇಪಾಳದೊಂದಿಗಿನ ಉತ್ತಮ ಸಂಬಂಧಗಳು, ಭಾರತವು ತನ್ನ ನೆರೆಹೊರೆಯಲ್ಲಿ ಭದ್ರತೆ ಮತ್ತು ಭೂರಾಜಕೀಯ ಸಮಸ್ಯೆಗಳನ್ನು ಹೆಚ್ಚು ಸುಗಮವಾಗಿ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೂ, ಅವರ ರಾಜಕೀಯ ಸಂಬಂಧವು, ಈ ಹಿಂದಿನ ಕಾಲಾಪಾನಿ ಪ್ರದೇಶದ ಗಡಿ ವಿವಾದದಿಂದಾಗಿ ಸರಾಗವಾದ ಹರಿವಿಗಿಂತ ಹೆಚ್ಚು ಉಬ್ಬರವಿಳಿತದ ಮೂಲಕ ಸಾಗಿದೆ. ನೇಪಾಳದಲ್ಲಿ ಖಡ್ಗ ಪ್ರಸಾದ್ ಶರ್ಮಾ ಓಲಿ ನೇತೃತ್ವದ ಆಕ್ರಮಣಕಾರಿ ಆಡಳಿತದ ಪತನದೊಂದಿಗೆ ಆದ ಸರ್ಕಾರ ಬದಲಾವಣೆ ಮತ್ತು 2022ರ ಚುನಾವಣಾ ಪೂರ್ವ ನೇಪಾಳಿ ಕಾಂಗ್ರೆಸ್ ಮತ್ತು ಮಾವೋವಾದಿ ಮೈತ್ರಿಯನ್ನು ಅಧಿಕಾರದಲ್ಲಿ ಮರುಸ್ಥಾಪಿಸಿದ್ದು, ಈ ವಿಷಯದಲ್ಲಿ ಸಂಬಂಧ ತಿಳಿಯಾಗುವ ನಿರೀಕ್ಷೆಯನ್ನು ಹೆಚ್ಚಿಸಿತು. ಕಳೆದ ವಾರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರು ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ, ಸಂಬಂಧಗಳಲ್ಲಿನ ಈ ಕಿರಿಕಿರಿಯ ಮೇಲೆ ಹೆಚ್ಚು ಗಮನಹರಿಸಲಾಗಲಿಲ್ಲ ಮತ್ತು ಅದು ಸ್ವತಃ ಸಾಪೇಕ್ಷ ಬಾಂಧವ್ಯದತ್ತ ಸಾಗಲು ಧನಾತ್ಮಕ ಕ್ರಮವೆಂದು ಪರಿಗಣಿಸಬಹುದು. ಹೆಚ್ಚು ಮುಖ್ಯವಾಗಿ, ವಿದ್ಯುತ್ ವಲಯದ ಅಭಿವೃದ್ಧಿ ಮತ್ತು ವ್ಯಾಪಾರದಲ್ಲಿ ಸಹಕಾರವನ್ನು ವಿಸ್ತರಿಸುವಲ್ಲಿ ಆರ್ಥಿಕ ಸಂಬಂಧಗಳು ಪ್ರಗತಿ ಕಂಡವು. ನೇಪಾಳದಿಂದ ಭಾರತಕ್ಕೆ ವಿದ್ಯುತ್ ರಫ್ತನ್ನು 10 ವರ್ಷಗಳಲ್ಲಿ 10,000 ಮೆಗಾವ್ಯಾಟ್ಗೆ ಹೆಚ್ಚಿಸುವ ಒಪ್ಪಂದದ ಅಂತಿಮಗೊಳಿಸುವಿಕೆ, ಹೊಸ ಪ್ರಸರಣ ಮಾರ್ಗಗಳ ಅಭಿವೃದ್ಧಿ, ಸಿಲಿಗುರಿ ಮತ್ತು ಝಾಪಾ ನಡುವೆ ಪೆಟ್ರೋಲಿಯಂ ಸರಬರಾಜು ಪೈಪ್ಲೈನ್ ನಿರ್ಮಾಣಕ್ಕೆ ಒಪ್ಪಂದದ ಒಡಂಬಡಿಕೆ, ಜೊತೆಗೆ ಪ್ರಸ್ತುತ ಪೈಪ್ಲೈನ್ಗಳ ವಿಸ್ತರಣೆ ಮತ್ತು ಹೊಸ ಟರ್ಮಿನಲ್ಗಳ ನಿರ್ಮಾಣ ಸಕಾರಾತ್ಮಕ ಕ್ರಮಗಳಾಗಿವೆ. ಆದರೆ, ನೇಪಾಳದ ಜಲವಿದ್ಯುತ್ಅನ್ನು ಭಾರತದ ಪ್ರದೇಶದ ಮೂಲಕ ಬಾಂಗ್ಲಾದೇಶಕ್ಕೆ ರಫ್ತು ಮಾಡುವ ಭಾರತದ ಪ್ರಸ್ತಾಪವನ್ನು ಮುಂದಕ್ಕೆ ಕೊಂಡೊಯ್ಯುವ ಒಪ್ಪಂದ ಶ್ರೀ ದಹಾಲ್ ಅವರ ಭೇಟಿಯ ಪ್ರಮುಖ ಅಂಶವಾಗಿತ್ತು.
ಈ ಒಪ್ಪಂದಗಳು ಕಾರ್ಯರೂಪಕ್ಕೆ ಬಂದಮೇಲೆ ಶ್ರೀ ದಹಾಲ್ ಅವರ ಭೇಟಿಯ ಯಶಸ್ಸನ್ನು ನಿರ್ಣಯಿಸಲಾಗುತ್ತದೆ, ಆದರೆ ಇತ್ತೀಚಿನ ಭಾರತೀಯ ಕಾರ್ಯಕ್ರಮಗಳಾದ ರೈಲು ಸಂಪರ್ಕ ಮತ್ತು ಜಲವಿದ್ಯುತ್ ಯೋಜನೆಗಳಲ್ಲಿ ಸಾಧಿಸಿದ ಪ್ರಗತಿಯು ಉತ್ತೇಜನಕಾರಿಯಾಗಿದೆ. ಅಭಿವೃದ್ಧಿ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವ ವಿಧಾನದ ಮೂಲಕ ಸಂಬಂಧಗಳನ್ನು ವಿಸ್ತರಿಸಲು ಹೊಸ ದೆಹಲಿಯು ನೀಡುತ್ತಿರುವ ಒತ್ತು, ನೇಪಾಳದಲ್ಲಿ ಹೆಚ್ಚು ಸದ್ದು ಮಾಡುವ ಆದರೆ ಕಡಿಮೆ ಕಾರ್ಯಸಾಧುವಾದ ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಮುಂದಡಿಯಿಟ್ಟಿರುವ ಕ್ರಮಕ್ಕಿಂತ ಭಿನ್ನವಾಗಿದೆ. ಇದಲ್ಲದೇ, ಇತ್ತೀಚಿನ ವರ್ಷಗಳಲ್ಲಿ ನೇಪಾಳದ ಸಂಕೀರ್ಣ ಆಂತರಿಕ ರಾಜಕೀಯ ಸಂಬಂಧಗಳಲ್ಲಿ ಕಡಿಮೆ ಹಸ್ತಕ್ಷೇಪ ಮಾಡುವ ವಿಧಾನವು ಭಾರತ ಸರ್ಕಾರಕ್ಕೆ ಸೂಕ್ತವಾಗಿದೆ, ವಿಶೇಷವಾಗಿ ಕಳೆದ ದಶಕದಲ್ಲಿ ಮಾಧೇಸಿ ಆಂದೋಲನಗಳಲ್ಲಿ ಭಾರತದ ಹಸ್ತಕ್ಷೇಪದ ಗ್ರಹಿಕೆಗಳ ನಂತರ, ಅತ್ಯುಗ್ರ ರಾಷ್ಟ್ರೀಯವಾದಿಗಳು ಭಾರತ ವಿರೋಧಿ ಮಾತುಗಳನ್ನು ಪಠಿಸಲು ಕಾರಣವಾಯಿತು. ಆರ್ಥಿಕ ಸಂಬಂಧಗಳಿಗೆ ಒತ್ತು ನೀಡುವುದು, ಪರಸ್ಪರ ಸಂಬಂಧವನ್ನು ಉತ್ತಮ ಸ್ಥಿತಿಯಲ್ಲಿಡಬೇಕಿದ್ದರೂ, ಸರ್ಕಾರಗಳು ಗಡಿ ಸಮಸ್ಯೆಯನ್ನು ಹಿಂದಕ್ಕೆ ಬಿಟ್ಟು ಅವುಗಳು ತನ್ನಷ್ಟಕ್ಕೆ ತಾವೇ ಬಗೆಹರಿಯುತ್ತವೆ ಎಂದು ಸುಮ್ಮನಿರಲು ಸಾಧ್ಯವಿಲ್ಲ. ಮುಂದುವರಿದಂತೆ, ಸಮಸ್ಯೆಯನ್ನು ಚರ್ಚಿಸಲು ಮತ್ತು ಶಾಶ್ವತ ಪರಿಹಾರವನ್ನು ಹುಡುಕುವ ವಿಧಾನಗಳು ಆದ್ಯತೆಯಾಗಿರಬೇಕು.
COMMents
SHARE